Sunday, October 5, 2008

ನನ್ನಿಯನ ಜೊತೆಯಲ್ಲಿ














ಮುಂಜಾನೆಯ ಮಂಜಿನಲಿ
ತಂಗಾಳಿಯ ತಂಪಿನಲಿ
ವನರಾಶಿಯ ಸೊಬಗಿನಲಿ
ಕುಳಿತಿದ್ದೆನು ನನ್ನಿಯನ ಜೊತೆಯಲ್ಲಿ
ಟೀ ತೋಟದ ನಡುವಿನಲ್ಲಿ

ಪ್ರಕೃತಿಯ ಮಡಿಲಲ್ಲಿ
ಸುರಿವ ಸೋನೆಯಡಿಯಲ್ಲಿ
ಮೈ ನಡುಗಿಸುವ ಚಳಿಯಲ್ಲಿ
ಕುಳಿತಿದ್ದೆನು ನನ್ನಿಯನ ಜೊತೆಯಲ್ಲಿ
ಟೀ ತೋಟದ ನಡುವಿನಲ್ಲಿ

ಕಂಗಳಿಗೆ ಮುದನೀಡುವ ಹಸಿರಿನ ತೋಟದಲಿ
ಕಿವಿಗೆ ಇಂಪಾಗಿ ಕೇಳುವ
ಕೋಗಿಲೆಯ ಗಾನದಲಿ
ಮನಸ್ಸಿಗೆ ಕಚಗುಳಿಇಡುವ
ನಿಸರ್ಗದ ಅಡಿಯಲ್ಲಿ
ಕುಳಿತಿದ್ದೆನು ನನ್ನಿಯನ ಜೊತೆಯಲ್ಲಿ
ಟೀ ತೋಟದ ನಡುವಿನಲಿ.

Wednesday, September 24, 2008

ಸವಿನುಡಿ

ನನ್ನೆದೆ ಗೂಡಿನಲಿ ಬೆಚ್ಚಗೆ ಕುಳಿತಿರುವ ನನ್ನಿನಿಯ
ಒಲವಿನ ಸವಿ ಮಾತನು ಹೇಳುವೆ
ಆಲಿಸು ಓ ಗೆಳೆಯ,
ನಮ್ಮಿಬ್ಬರ ಪ್ರೀತಿ ಮಧುರ
ನಮ್ಮಿಬ್ಬರ ಪ್ರೇಮ ಅಮರ
ನಮ್ಮೀ ಮಧುರ ಬಾಂಧವ್ಯ
ಇಂಪಾದ ವೀಣೆಯ ಝೇಂಕಾರದಂತೆ
ಮೆಲ್ಲನೆ ಸಾಗುತ್ತಾ
ಚಿರನೂತನವಾಗಿ ನುಡಿಯುತ್ತಿರಲಿ
ಓ ನನ್ನ ಹೃದಯ ಸಾಮ್ರಾಜ್ಯದ ಒಡೆಯ
ಆಲಿಸಿದೆಯಾ ನನ್ನೀ ಸವಿ ನುಡಿಯಾ?

ಮನಸು

ಮನದ ಇಬ್ಬನಿ ಕರಗಿತು
ಮನದಿ ಸಂತಸ ಅರಳಿತು
ಹೃದಯ ಹಾಡಿತು
ತನುವು ಕುಣಿಯಿತು
ಎದೆಯಲಿ ಅನುರಾಗ ಮೂಡಿತು
ಒಲವ ಬಯಸಿತು
ಹರುಷ ಉಕ್ಕಿತು
ಮನವು ಬಾನಂಗಳದಿ ತೇಲಿತು
ಹಕ್ಕಿಯ ಹಾಗೆ ಹಾರಿತು
ಕನಸು ಕಣ್ಣಲಿ ಕುಣಿಯಿತು
ಮನಸು ಮನದಿನಿಯನ ಸನಿಹ ಬಯಸಿತು.

Tuesday, September 9, 2008

ಅಂದ ಚಂದ

ಕೋಗಿಲೆ "ಕುಹು ಕುಹು" ಧ್ವನಿಚಂದ
ಮಗುವಿನ "ಕಿಲ ಕಿಲ"ನಗು ಅಂದ
ಹಕ್ಕಿಗಳ "ಚಿಲಿ ಪಿಲಿ"ಕಲರವ ಚಂದ
ನವಿಲಿನ "ತಕದಿಮಿ"ನಾಟ್ಯವು ಅಂದ
ವನರಾಶಿಯ "ಹಸಿರಿನ"ಸೊಬಗು ಚಂದ
ಆದರೆ ನನಗೆ "ನನ್ನ ನಲ್ಲನ ನೋಟವು ಬಲುಚಂದ"

ದುಡುಕು

ಅವನು ವರ್ಣಿಸುತ್ತಿದ್ದನು
ತನ್ನ ನಲ್ಲೆಯ ಹತ್ತಿರ
ಆಹಾ!! ಅದೆಂಥಾ ಸುಂದರವಾದ ವದನ
ಮುದ್ದಾದ ಪುಟ್ಟ ಕೆಂಪು ತುಟಿಗಳು
ಅರಳಿದ ಬಟ್ಟಲು ಕಂಗಳು
ಸೇಬುಗೆನ್ನೆ! ಸುಳಿಗಲ್ಲ!!
ಎಂದು ವರ್ಣಿಸುತ್ತಿರಲು
ನಲ್ಲೆ ಕೋಪಂದಿಂದ ಕುದಿಯುತ್ತ
ಹಾಗಾದರೆ ನಿನಗೆ ವಿಛ್ಛೇದನ ಕೊಡುವೆ
ನನ್ನ ನಿನ್ನ ಸಂಬಂಧ ಕಡಿಯಿತು
ಎಂದು ನಲ್ಲ ಹೇಳುತ್ತಿದ್ದ ಮಾತು ಲಕ್ಷಿಸದೆ
ದುಡು ದುಡು ನಡೆದಳು ತೌರಿಗೆ
ನಂತರ ತಿಳಿಯಿತು ತನ್ನ ನಲ್ಲ ವರ್ಣಿಸುತ್ತಿದ್ದದ್ದು
ಒಂದು" ಮಗುವಿನ ವದನ" ವನ್ನು ಎಂದು.

Wednesday, July 9, 2008

ಆಸರೆ

ಬಾಳೆಂಬ ತೋಟದ ಬಳ್ಳಿಯಾದ ನನಗೆ
ದೇಹವೆಂಬ ಮರವಾಗಿ ಆಸರೆ ಯಾದೆ.
ನಿನ್ನ ಪ್ರೀತಿಯೆಂಬ ತಂಪಿನ ನೆರಳಲ್ಲಿ
ಜೀವನವೆಲ್ಲಾ ಕಳೆಯುವ ಆಸೆ.

ವಸಂತ

ವಸಂತ ಮಾಸ ಬಂದಿತು
ಮನಕೆ ಹರುಷ ತಂದಿತು
ಮರಬಳ್ಳಿಗಳ ಚಿಗುರಿನ ಹಸಿರಿನ ಕಂಪು
ಎಲ್ಲೆಲ್ಲೂ ಕೋಗಿಲೆ ಗಾನದ ಇಂಪು
ಋತುಗಳ ರಾಜನ ಆಗಮನ
ಮನಸ್ಸಿಗೆ ಆನಂದದ ನಂದನವನ
ಕಣ್ಮನ ತಣಿಸುವ ಹೂವಿನ ಅಂದ
ಎಲ್ಲೆಲ್ಲೂ ದುಂಬಿಗೆ ಆನಂದದ ಮಕರಂದ
ವಸಂತ ಮಾಸ ಬಂದಿತು
ಮನಕೆ ಹರುಷ ತಂದಿತು.

Saturday, July 5, 2008

ಮುನ್ನಾರ್ ಪ್ರವಾಸ ಕಥನ

ಎಲ್ಲರೂ ಕನಸು ಕಾಣ್ತಾ ಆ ಊರಿಗೆ ಹೋಗ್ಬೇಕು ಎಂದು ಬಯಸಿ ಪ್ರವಾಸ ಹೋಗುವುದಕ್ಕೂ, ದಿಡೀರನೆ ಯಾವ ಸುಳಿವಿಲ್ಲದೇ ಪ್ರವಾಸ ಹೋಗುವುದಕ್ಕೂ ಎಷ್ಟು ವ್ಯತ್ಯಾಸವಲ್ಲವೆ? ಇದ್ದಕ್ಕಿದ್ದಂತೆ ಪ್ರವಾಸ ಹೊರಟರೆ ಎಂಥಾ ಥ್ರಿಲ್ ಎನಿಸುವುದಿಲ್ಲವೆ? ಹಾ! ನನಗಾಗಿದ್ದು ಕೂಡಾ ಹಾಗೆ. ನನಗೆ ಗೊತ್ತಾಗದ ಹಾಗೆ ಯಜ್ಞೇಶ್ ನನ್ನನ್ನು ಮುನ್ನಾರ್ ಗೆ ಕರೆದುಕೊಂಡು ಹೋಗಿದ್ದರು. ನನಗೆ ಮುನ್ನಾರಿಗೆ ಹೋಗುತ್ತೇನೆಂಬ ಕಲ್ಪನೆಯೇ ಇರಲಿಲ್ಲ. ಹಾಗೆ ಹೋದಾಗ ನನಗಾದ ಸಂತಸಕ್ಕೆ ಮಿತಿ ಇರಲಿಲ್ಲ. ಮುನ್ನಾರ್ ಹೆಸರಿಗೆ ತಕ್ಕಂತೆ ಒಂದು ಸುಂದರವಾದ ಸ್ಥಳ. ಕೇರಳದ ಒಂದು ಪ್ರಸಿದ್ಧವಾದ ಹಿಲ್ ಸ್ಟೇಶನ್. ಅಲ್ಲಿ ಎಲ್ಲಿ ನೋಡಿದರೂ ಟೀ ತೋಟದ ರಮಣೀಯ ದೃಶ್ಯಗಳೇ ಕಾಣಸಿಗುತ್ತವೆ. ನಾವು ಅಲ್ಲಿ ಹೋದಾಗ ಮಧ್ಯಾಹ್ನದ ಸಮಯ. ಆದರೂ ಮುಸ್ಸಂಜೆಯೇನೋ ಅನಿಸುತ್ತಿತ್ತು. ಏಕೆಂದರೆ ಇಡೀ ಟೀ ಬೆಟ್ಟಗಳ ಮೇಲಿಂದ ಮಂಜು ಸುರಿಯುತ್ತಿತ್ತು. ಸಣ್ಣ ಜಿಟಿ ಜಿಟಿ ಮಳೆ ಹನಿಯುತ್ತಿತ್ತು. ಆಹ್! ಅದೆಂಥಾ ಸುಂದರವಾದ ನೋಟ. "ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದ ಹಾಗಿತ್ತು". ನಂತರ ನಾವು ಹೊಟೇಲ್ಲಿಗೆ ಹೋಗಿ ದಣಿವಾರಿಸಿಕೊಂಡು ಮುನ್ನಾರಿನ ಪ್ರಸಿದ್ಧ ಸ್ಥಳಗಳ ವೀಕ್ಷಣೆಗೆಂದು ಹೊರಟೆವು.

ಆದರೆ ನಮಗೆ ನಂತರ ತಿಳಿಯಿತು ಅಲ್ಲಿ ಕಾಣಸಿಗುವ ಸ್ಥಳಗಳೆಲ್ಲಾ ಸುಂದರವೆಂದು. ನಾವು ಮೊದಲು ಹೋಗಿದ್ದು ಟಾಪ್ ಸ್ಟೇಶನ್ ಎಂಬ ಒಂದು ಸುಂದರ ತಾಣಕ್ಕೆ. ಇದು ಕೇರಳ ಮತ್ತು ತಮಿಳುನಾಡಿನ ಬಾರ್ಡರ್ನಲ್ಲಿದೆ. ಅಲ್ಲಿ ಒಂದು ಕಿ.ಮೀ ದೂರ ನಡೆದು ಹೋದರೆ ಟಾಪ್ ಸ್ಟೇಶನ್ ( ವ್ಯೂ ಪಾಯಿಂಟ್) ಸಿಗುತ್ತದೆ. ವ್ಹಾ! ಎಲ್ಲಿ ನಿಂತು ನೋಡಿದರೆ ರುದ್ರರಮಣೀಯ ದೃಶ್ಯ ನಮಗೆ ಗೋಚರಿಸುತ್ತದೆ. ಎತ್ತರವಾದ ಬೆಟ್ಟದ ತುದಿಗೆ ಮುತ್ತಿಡುತ್ತಿರುವ ಬೆಳ್ಳಿ ಮೋಡಗಳ ಸಾಲು, ವನರಾಶಿಯ ಹಸಿರಿನ ಸೊಬಗು ನಮ್ಮ ಮನಸ್ಸಿಗೆ ಕಚಗುಳಿ ಇಡುತ್ತದೆ. ನಂತರ ನಾವು ಅಲ್ಲಿಂದ ಕುಂದಲ ಡ್ಯಾಂ, ಎಕೊ ಪಾಯಿಂಟ್ ಮುಂತಾದ ಸ್ಥಳಗಳನ್ನು ವೀಕ್ಷಿಸಿ ಹೊಟೆಲ್ ಗೆ ವಾಪಸ್ಸಾದೆವು.

ಮರುದಿನ ಮುಂಜಾನೆ ಕೇರಳದ ಅತ್ಯಂತ ಎತ್ತರವಾದ ಪ್ರದೇಶ, ಅತ್ಯಂತ ಸುಂದರ ಸ್ಥಳ ರಾಜ್ ಮಲೈ ಗೆ ಭೇಟಿ ನೀಡಿದೆವು. ಇದು ದಕ್ಷಿಣ ಭಾರತದ ಅತಿ ಎತ್ತರದ ಪ್ರದೇಶ. ಇದು ನ್ಯಾಶನಲ್ ಪಾರ್ಕ್ ಕೂಡ. ಇಲ್ಲಿಗೆ ೧೫ ಕಿ ಮಿ. ಕಾರನಲ್ಲಿ ಹೋಗಿ ನಂತರ ಟಿಕೆಟ್ ಪಡೆದು ಅವರ ಬಸ್ಸಿನಲ್ಲಿ ಹೋಗಬೇಕು. ಮೇಲೆ ಹೋಗುವಾಗ ಅತ್ಯಂತ ಎಚ್ಚರಿಕೆಯಿಂದ ಹೋಗಬೇಕು. ಏಕೆಂದರೆ ಅತ್ಯಂತ ಕಿರಿದಾದ ರಸ್ತೆ, ಒಂದು ಕಡೆ ಆಳವಾದ ಪ್ರಪಾತ ಮತ್ತೊಂದು ಕಡೆ ಅತ್ಯಂತ ಎತ್ತರದ ಟೀ ಬೆಟ್ಟಗಳ ಸಾಲು. ಮೇಲೆ ಹೋದಂತೆಲ್ಲಾ ತುಂಬಾ ಭಯವೆನಿಸುತ್ತದೆ. ಚಾಲಕ ಸ್ವಲ್ಪ ನಿಯಂತ್ರಣ ತಪ್ಪಿದರೂ ಪ್ರಪಾತಕ್ಕೆ ಬಸ್ಸು ಉರುಳುವುದು ಗ್ಯಾರಂಟಿ. ಹಾಗೆ ಎಷ್ಟು ರಮಣೀಯ ನೋಟವೋ ಅಷ್ಟೇ ಭೀಕರ ಕೂಡ ಹೌದು. ನಮ್ಮ ಬಸ್ಸು ಮೆಲ್ಲನೆ ಸಾಗುತ್ತಿತ್ತು. ನಾವು ಸುಂದರ ದೃಶ್ಯಗಳನ್ನು ನೋಡುತ್ತಾ, ಹೋಗುತ್ತಿರುವಾಗ ಮಧ್ಯ ಒಂದು ಸುಂದರ ಜಲಪಾತ ನಮ್ಮನ್ನು ಕಣ್ಸೆಳೆಯುವಂತೆ ಮಾಡುತ್ತದೆ. ನಂತರ ಮೇಲೆ ಹೋದಂತೆಲ್ಲಾ ಮಂಜುಸುರಿಯುವುದು ಹೆಚ್ಚುತ್ತಾ ಹೋಗುತ್ತದೆ. ಆ ದೃಶ್ಯವನ್ನು ನೋಡಲು ಬಲು ಸೊಗಸು. ಎರಡು ಕಣ್ಣು ಸಾಲುವುದಿಲ್ಲ ಎನಿಸುತ್ತದೆ. ನಂತರ ೨ ಕಿ ಮೀ ನಡೆದು ಹೋಗಬೇಕು. ಆಗ ಮಂಜು ಸುರಿಯುವ ಪ್ರಮಾಣ ಇನ್ನೂ ಹೆಚ್ಚಿ, ತಂಪಾದ ಹಾಗು ಚಳಿಯಾದ ವತಾವರಣ ಸೃಷ್ಟಿಯಾಗುತ್ತದೆ. ನಿಸರ್ಗದ ಸುಂದರ ದೃಶ್ಯಗಳು ಕಾಣುತ್ತದೆ. ಇದನ್ನೆಲ್ಲಾ ವೀಕ್ಷಿಸಿ ನಮ್ಮ ಪಯಣ ಸಾಗಿದ್ದು Tea Factory ಯತ್ತ. ಅಲ್ಲಿ ಟೀ ಎಲೆಗಳಿಂದ ಹೇಗೆ ಟೀ ಪೌಡರ್ ತಯಾರಿಸುತ್ತಾರೆ ಎಂಬ ವಿವರಣೆ ಸಿಗುತ್ತದೆ. ಸ್ವತಹ: ನಾವೇ ಟೀ ಪೌಡರ್ ತಯಾರಾಗುವ ರೀತಿ ನೋಡಬಹುದು. ನಂತರ ಇಂನ್ನೊದು ವ್ಯೂ ಪಾಯಿಂಟ್ ನೋಡಿ ಹೊಟೆಲ್ ಗೆ ವಾಪಸ್ಸಾದೆವು.

ದೇಹಕ್ಕೆ ದಣಿವಾಗಿದ್ದರೂ, ನಮ್ಮ ಮನಸ್ಸೆಲ್ಲಾ ಸಂತಸದಿಂದ ಕುಣಿಯುತ್ತಿತ್ತು. ಆಗ ನನಗೆ ಸಿನಿಮಾದ ಒಂದು ಹಾಡಿನ ಸಾಲು ನೆನಪಾಯಿತು. "ಈ ದಿನ ಖುಶಿಯಾಗಿದೆ.... ನನಗೇಕೆ ಹೀಗಾಗಿದೆ?". ಅದನ್ನು ಮನಸ್ಸಿನಲ್ಲೇ ಗುನುಗಿ ಸಂತಸದಿಂದ ಬೆಂಗಳೂರಿಗೆ ವಾಪಸ್ಸಾದೆವು.

Wednesday, July 2, 2008

ಸೃಷ್ಠಿ

ಬಾನಂಗಳದಲ್ಲಿ ಮಿನುಗುವ
ನಕ್ಷತ್ರಗಳ ಗುಂಪು
ಇದಕ್ಕೆ ಕಲಶವಿಟ್ಟಂತೆ
ಕಣ್ಮನ ತಣಿಸುವ
ಚಂದ್ರಮನ ತಂಪು
ಆಗಸದ ತುಂಬಾ
ಬೆಳ್ಳಿ ಮೋಡಗಳ ಚಿತ್ತಾರ
ಮುಗಿಲು ಚುಂಬಿಸುವಂತೆ
ಬೆಳೆದು ನಿಂತ ಮರ ಗಿಡಗಳ ಸಾಲು
ಮನ ಮೂಕವಾಯಿತು!
ಪ್ರಕೃತಿಯ ಈ ಸೃಷ್ಠಿ ವೈಚಿತ್ರ್ಯಕೆ!!
ಏನಿರಬಹುದು? ಈ ಸೃಷ್ಠಿಯ ಮರ್ಮ???